Friday, 15 June 2012

ಕಡಬು ಬಾಳೆ ಎಲೆಯ - Kadabu

ಬಾಳೆ ಎಲೆಯ ಕಡಬು 



 
                ಈ ಕಡಬನ್ನು ಮಾಡಲು ಬಾಳೆಲೆಯು ಬೇಕಾಗುತ್ತದೆ. ಸುಮಾರು ಅರ್ಧ ಮಾರು ಉದ್ದರ ಎಲೆಯು ಬೇಕಾಗುತ್ತದೆ. ಇದನ್ನು ಬೆಂಕಿಯಲ್ಲಿ ಬಾಡಿಸಿ ಬಾಡಿಸಿದರೆ ಕೊಟ್ಟೆ ಮಾಡುವಾಗ ಎಲೆ ಹರಿಯುವುದಿಲ್ಲ. ಸುರುಳಿ ಮಾಡಿ ಎರಡು ಸುತ್ತು ಬರುವ ಹಾಗೆ ಸುತ್ತುತ್ತಾರೆ. ಸುತ್ತಿ ಹಿಟ್ಟನ್ನು ಹಾಕಿ ಎರಡು ಕಡೆಗೇ ಬಾಳೆ ಬಳ್ಳಿಯಿಂದ ಕಟ್ಟಿ, ಹಂಡೆಯಲ್ಲಿ ಹಾಕಿ ಬಾಯಿಯನ್ನು ಬಾಳೆ ಎಲೆಯಿಂದ ಮುಚ್ಚಿ, ಅದರ ಮೇಲೆ ಅಕ್ಕಿಯನ್ನು ಇಟ್ಟು ಬೇಯಿಸುತ್ತಾರೆ. 4-5 ತಾಸು ಬೇಯಲು ಬೇಕಾಗುತ್ತದೆ. ಅಕ್ಕಿ ಬೆಂದು ಅನ್ನವಾಗಿದ್ದರೆ ಕಡಬು ಬೆಂದಿದೆ ಎಂದರ್ಥ. ನಂತರ ಇದನ್ನು ಹಂಡೆಯಿಂದ ತೆಗೆದು ಇಡುತ್ತಾರೆ. 


            ಈ ಬಾಳೆ ಎಲೆಯ ಕಡಬನ್ನು ಕರೆಒಕ್ಕಲಿಗರಲ್ಲಿ ಹೆಚ್ಚಾಗಿ ದೀಪಾವಳಿ ಹಬ್ಬದ ಮಾರನೆಯ ದಿನ ಮಾಡುವುದು ಹೆಚ್ಚು ವಿಶೇಷವಾಗಿದೆ. ಆ ದಿನ ಯಾಕೆಂದರೆ ದೀಪಾವಳಿಯ ಹಬ್ಬದಂದು ಬಿಂಗಿ (ಕೋಲಾಟ) ಏಳು (ಆಡು)ತ್ತಾರೆ. ಬಿಂಗಿಪದ ಹಾಡುವವರು ಪ್ರತಿಯೊಬ್ಬರ ಮನೆ ಮನೆಗೆ ಹೋಗಿ ಪದ ಹೇಳಿ ಕೋಲಾಟವಾಡುತ್ತಾರೆ. ಹೀಗೆ ಪದ ಹೇಳಿದವರಿಗೆ ಹಣ, ಅಕ್ಕಿ, ಕಾಯಿ ಇವುಗಳನ್ನು ಕೊಡುವುದರ ಜೊತೆಗೆ ಕಡಬನ್ನು ಕೊಡುತ್ತಾರೆ. ಏನು ಇಲ್ಲಾದವರು ಕಡಬನ್ನು ಮಾತ್ರ ಕೊಡುತ್ತಾರೆ. 
 







ತಕ್ಕಡಿ ಪೂಜೆ - Takkadi Pooje

 ತಕ್ಕಡಿ ಪೂಜೆ -  Takkadi Pooje 



       ವರ್ಷದಲ್ಲಿ ಎರಡು ಬಾರಿ ಅಡಿಕೆ ಸುಲಿಯುವ (ಕೊಯ್ಯುವ) ಕೆಲಸ ಇರುತ್ತದೆ. ಇಂದು ಸುಲಿದ ಹಸಿ ಅಡಿಕೆಯನ್ನು ಅದೇ ದಿನ ಬೇಯಿಸಿ ಒಣಗಿಸಬೇಕು, ಬೇಯಿಸಿದ ಅಡಿಕೆ ಒಣಗಲು ಸುಮಾರು 8-10 ದಿನ ಬೇಕಾಗುತ್ತದೆ. ಅಡಿಕೆ ಮಾರಾಟ ಮಾಡುವ ಮೊದಲ ದಿನ ಅಡಿಕೆ ತೊಗರು (ಅಡಿಕೆ ಬೇಯಿಸಿದ ನೀರು - Concentrated (ಕೆಂಪು ಬಣ್ಣ ಬರುತ್ತದೆ.) ಹಾಕಿ ಒಂದು ಬಿಸಿಲಿನಲ್ಲಿ ಮಾತ್ರ ಒಣಗಿಸಬೇಕು. ಅಡಿಕೆಯೆಲ್ಲ ಕೊಯ್ದ ಆದ ಮೇಲೆ 'ಕೊನೆಹುಲ್ಕಿ' ಮಾಡುತ್ತಾರೆ. 


           'ಕೊನೆಹುಲ್ಕಿ' ಅಂದರೆ ಅಡಿಕೆ ಎಲ್ಲವನ್ನು ಕೊಯ್ದು, ಸುಲಿದ ಮೇಲೆ ಅಲ್ಲಿ ಕೆಲಸಕ್ಕೆ ಬಂದವರಿಗೆ ಸಿಹಿ ತಿಂಡಿಯನ್ನು ಮಾಡಿ ಹಂಚುತ್ತಾರೆ. ಕರೆಒಕ್ಕಲಿಗರು ಹೆಚ್ಚಾಗಿ ಕಡ್ಲೆಮಡ್ಡಿಯನ್ನು ಮಾಡುತ್ತಾರೆ. ಅದು ಅವರ ವಿಶೇಷ ತಿಂಡಿ ಆಗಿದೆ.  


ಕರೆ-ಒಕ್ಕಲಿಗರು ತಾವು ಬೆಳೆದ ಹೊಸ ಫಲ ಅಥವಾ ಬೆಳೆಗಳನ್ನು ಮಾರಾಟ ಮಾಡುವ ಮೊದಲು ಅದನ್ನು ?ಕ್ಕಡಿಯ ಮುಂದೆ ಇಟ್ಟು ಪೂಜೆ ಮಾಡುತ್ತಾರೆ. ಪೂಜೆ ಮಾಡಿದ ಮೇಲೆ ತಕ್ಕಡಿ ಪೂಜೆ ಮಾಡಿದ ಮೇಲೆ ಮಾರಾಟ ಮತ್ತು ತಿನ್ನಲು ಉಪಯೋಗಿಸಬಹುದು.  ಮನೆಯಲ್ಲಿ ತಿನ್ನಲು ಉಪಯೋಗಿಸುವ ಅಡಿಕೆಗೆ ಬಣ್ಣ ಹಾಕುವುದಿಲ್ಲ. ಬಣ್ಣ ಹಾಕಿದ ಅಡಿಕೆ ತಿಂದರೆ ಕೆಲವರಿಗೆ ಬಾಯಿ (ತುಟಿ) ಒಡೆಯುತ್ತದೆ. 



Sunday, 10 June 2012

ದೀಪಾವಳಿಹಬ್ಬ, ಒಳಕಲ್ಲು (ಅರಿಯುವಕಲ್ಲು) ಪೂಜೆ Divalli

ಒಳಕಲ್ಲು (ಅರಿಯುವ ಕಲ್ಲು) ಪೂಜೆ


ದೀಪಾವಳಿ ಹಬ್ಬದ ಬಲಿ ಪಾಡ್ಯದ ದಿನ ಎಲ್ಲಾ ದೇವರುಗಳಿಗೂ ಪೂಜೆ ಮಾಡುವ ಹಾಗೆಯೇ ಮನೆಯಲ್ಲಿರುವ ಒಳಕಲ್ಲಿಗೂ ಪೂಜೆಯನ್ನು ಮಾಡುತ್ತಾರೆ. ಮನೆಯ ಜನಮಾನ ಈ ದೇವರಿಗೆ ಪೂಜೆಯನ್ನು ಮಾಡುತ್ತಾರೆ. ಸೇಡಿ, ಕೆಮ್ಮಣ್ಣನ್ನು ಸುತ್ತಲು ಬಳಿದು ಎಡೆಯನ್ನು ಇಟ್ಟು ಪೂಜಿಸುತ್ತಾರೆ. ನಂತರ ಈ ಎಡೆಯನ್ನು ಮನೆಯ ಹೆಂಗಸರು (ಯಜಮಾನತಿ) ತಿನ್ನುತ್ತಾರೆ.